ನಂದಗುಡಿ ಕೈಗಾರಿಕಾ ಪ್ರದೇಶ: ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

Banglore:

Font size:

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿ ಕೈಗಾರಿಕೆಗಳಿಗಾಗಿ 1,000 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ಹಂತದ ಅಧಿಸೂಚನೆ ಆಗಿದ್ದು, ತ್ವರಿತಗತಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಈ ಮೂಲಕ ಆಧುನಿಕ ಕೈಗಾರಿಕೆಗಳು ಇಲ್ಲಿಗೆ ಬರಲು ಅನುವು ಮಾಡಿಕೊಡಬೇಕು ಎಂದು ಅಲ್ಲಿನ ಶಾಸಕ ಶರತ್ ಬಚ್ಚೇಗೌಡ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಮಂಗಳವಾರ ಅವರು ಖನಿಜ ಭವನದಲ್ಲಿ ಈ ಸಂಬಂಧ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವರೊಂದಿಗೆ ಮಾತನಾಡಿದ ಶಾಸಕರು, ಹೊಸಕೋಟೆಯು ಬೆಂಗಳೂರಿಗೆ ಸಮೀಪದಲ್ಲಿದ್ದು, ಕೈಗಾರಿಕೆಗಳ ಬೆಳವಣಿಗೆಗೆ ಸೂಕ್ತವಾಗಿದೆ. ಜಾಗತಿಕ ಮಟ್ಟದ ಹತ್ತಾರು ಕಂಪನಿಗಳು ಇಲ್ಲಿ ತಮ್ಮ ಡೇಟಾ ಸೆಂಟರ್ ಗಳನ್ನು ಆರಂಭಿಸಲು ಆಸಕ್ತಿ ಹೊಂದಿವೆ. ಇದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ಸದ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾಥಮಿಕ ಹಂತದಲ್ಲಿ ನಿಂತಿದೆ. ಇದನ್ನು ತ್ವರಿತವಾಗಿ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿ, ಅಂತಿಮ ಅಧಿಸೂಚನೆ ಹೊರಡಿಸಬೇಕು. ಹಲವು ಕಂಪನಿಗಳು ಈ ಭಾಗದಲ್ಲಿ ಭೂಮಿ ಬೇಕೆಂದು ಕೇಳುತ್ತಿವೆ ಎಂದು ವಿವರಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ಸಚಿವರು, `ಹೊಸಕೋಟೆ ತಾಲ್ಲೂಕಿನ ಶಾಸಕರು ಗಮನಕ್ಕೆ ತಂದಿರುವ ವಿಚಾರಕ್ಕೆ ಸ್ಪಂದಿಸಿ ಕ್ರಮ ಕೈಗೊಳ್ಳಲಾಗುವುದು. ನಂದಗುಡಿಯಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಸ್ವೀಡಿಷ್ ಕೈಗಾರಿಕಾ ಪಾರ್ಕ್ ಮತ್ತು ತೈವಾನ್ ಕೈಗಾರಿಕಾ ಪಾರ್ಕ್ ಸ್ಥಾಪಿಸುವ ಉದ್ದೇಶ ಸರಕಾರದ್ದಾಗಿದೆ. ಇದು ಸಾಧ್ಯವಾದರೆ, ಹೊಸಕೋಟೆ ಸುತ್ತಮುತ್ತಲಿನ ಯುವಜನರಿಗೂ ಉದ್ಯೋಗ ಸಿಗಲಿದ್ದು, ಆರ್ಥಿಕ ಅಭಿವೃದ್ಧಿಗೆ ವೇಗ ದೊರೆಯಲಿದೆ’ ಎಂದಿದ್ದಾರೆ.

೦೦೦

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕದ ಹೆಮ್ಮೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಆರಂಭಿಸುತ್ತಿರುವ ಸುಸಜ್ಜಿತ ಕಲಾಲೋಕ ಮಳಿಗೆಯನ್ನು ನವೆಂಬರ್ ಎರಡನೇ ವಾರದಲ್ಲಿ ಉದ್ಘಾಟಿಸಲಾಗುವುದು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರನ್ನೂ ಆಹ್ವಾನಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಈ ಸಂಬಂಧವಾಗಿ ಅವರು ಮಂಗಳವಾರ ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಅವರೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಸಿದ್ಧತೆ ಬಗ್ಗೆ ಚರ್ಚಿಸಿದರು.

ಕಲಾಲೋಕ ಮಳಿಗೆಯು ಮುಖ್ಯವಾಗಿ ದೇಶ/ವಿದೇಶಿ ಗ್ರಾಹಕರನ್ನು ಆದ್ಯತೆಯಾಗಿ ಇಟ್ಟುಕೊಂಡಿದೆ. ಕರ್ನಾಟಕದಲ್ಲಿ ಜಿ.ಐ. ಮಾನ್ಯತೆ ಹೊಂದಿರುವ 40ಕ್ಕೂ ಹೆಚ್ಚು ಉತ್ಪನ್ನಗಳಿವೆ. ಮೈಸೂರು ಸಿಲ್ಕ್, ಚನ್ನಪಟ್ಟಣದ ಬೊಂಬೆ, ಬಂಜಾರ ಉತ್ಪನ್ನಗಳು, ಇಳಕಲ್ ಸೀರೆ, ಕಾಫಿ, ಲಿಡ್ಕರ್ ಉತ್ಪನ್ನಗಳು, ಮೈಸೂರು ಸ್ಯಾಂಡಲ್ ಸೋಪ್ ತರಹದ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ಇವೆಲ್ಲವೂ ಕಲಾಲೋಕ ಮಳಿಗೆಯಲ್ಲಿ ಸಿಗುವಂತೆ ಮಾಡಲಾಗುವುದು. ಈ ಮೂಲಕ ಕರ್ನಾಟಕದ ಅಸ್ಮಿತೆ ಮತ್ತು ಪರಂಪರೆಗೆ ವ್ಯಾಪಕ ಮನ್ನಣೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕದ ವಿಶಿಷ್ಟ ಉತ್ಪನ್ನಗಳ ಬ್ರ್ಯಾಂಡಿಂಗ್ ಮಾಡುವುದು ಸರಕಾರದ ಆಶಯವಾಗಿದೆ. ಇದಕ್ಕೆ ತಕ್ಕಂತೆ ಗ್ರಾಹಕರಿಗೆ ಗಿಫ್ಟ್ ಬಾಕ್ಸ್ ಇತ್ಯಾದಿಗಳು ಸಿಗುವಂತೆ ಮಾಡಲಾಗುವುದು. ಜೊತೆಗೆ ಕಲಾಲೋಕ ಮಳಿಗೆಗೆ ತಾರಾವರ್ಚಸ್ಸಿನ ವ್ಯಕ್ತಿಗಳನ್ನು ಆಮಂತ್ರಿಸಲಾಗುವುದು. ಈ ಮೂಲಕ ವ್ಯವಸ್ಥಿತ ಪ್ರಚಾರ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಅವರು ವಿವರಿಸಿದ್ದಾರೆ.

Prev Post ಸ್ಪೀಕರ್ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿದ ಶಾಸಕ ಡಾ. ಭರತ್ ಶೆಟ್ಟಿ
Next Post ರಾಜ್ಯ ಹೈಕೋರ್ಟಿನ ತೀರ್ಪಿನಿಂದ ಹಿನ್ನಡೆ, ಷಡ್ಯಂತ್ರಕ್ಕೆ ತಡೆ ರೈತರ ಪಾಲಿಗೆ ಸತ್ತಂತಿದೆ ಸರಕಾರ: ವಿಜಯೇಂದ್ರ