ಕಾಂಗ್ರೆಸ್ಸಿಗರಿಗೆ ಹುಬ್ಬಳ್ಳಿ ಸೆಂಟ್ರಲ್ ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ಆಗ್ರಹ* *- ಗೋಪಾಲ್ ಜೋಶಿ ತಪ್ಪೆಸಗಿದ್ದರೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಿ*
ಹುಬ್ಬಳ್ಳಿ: ಗೋಪಾಲ್ ಜೋಶಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರು ವಿನಾಕಾರಣ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ತೆಂಗಿನಕಾಯಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇಂದ್ರ ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು. ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.
ಪ್ರಲ್ಹಾದ ಜೋಶಿ ಅವರ ಕುಟುಂಬ ಕಳೆದ 30 ವರ್ಷಗಳಿಂದಲೂ ಪ್ರತ್ಯೇಕವಾಗಿದೆ. ಅಲ್ಲದೇ, ಸಹೋದರರೊಂದಿಗೆ ತಮ್ಮ ಆರ್ಥಿಕ-ಕೌಟುಂಬಿಕ ವ್ಯವಹಾರವೂ ಇಲ್ಲ. ಯಾರಾದರೂ ನನ್ನ ಹೆಸರು ದುರ್ಬಳಕೆಗೆ ಯತ್ನಿಸಿದರೆ ಅದಕ್ಕೂ ತಮಗೂ ಸಂಬಂಧವಿಲ್ಲ. ನಾನು ಬಾಧ್ಯಸ್ತನಲ್ಲ ಎಂಬುದನ್ನು 2012ರಲ್ಲೇ ಸಚಿವರು ಕೋರ್ಟ್ ಅಫಿಡವಿಟ್ ಮೂಲಕ ಪ್ರಕಟಿಸಿದ್ದಾರೆ ಎಂದು ಮಹೇಶ ತೆಂಗಿನಕಾಯಿ ಸ್ಪಷ್ಟಪಡಿಸಿದರು.
*ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ:* ಗೋಪಾಲ್ ಜೋಶಿ ಪ್ರಕರಣಕ್ಕೂ ಸಚಿವರಿಗೂ ಯಾವುದೇ ಸಂಬಂಧವಿಲ್ಲ. ಗೋಪಾಲ್ ಜೋಶಿ ಅವರು ತಪ್ಪೆಸಗಿದ್ದರೆ ಸರ್ಕಾರ ಸಮರ್ಪಕ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಿ. ಇದರ ಹೊರತು ಅನಗತ್ಯವಾಗಿ ಪ್ರಲ್ಹಾದ ಜೋಶಿ ಅವರ ಹೆಸರು ಕೇಡಿಸೋ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಯಾರೂ ಮಾಡಬಾರದು ಎಂದು ಆಗ್ರಹಿಸಿದರು ಶಾಸಕ ಮಹೇಶ ತೆಂಗಿನಕಾಯಿ.
ಗೋಪಾಲ್ ಜೋಶಿ ಅವರ ಮೇಲಿನ ಆರೋಪದಲ್ಲಿ ಏನಾದರೂ ಸಾಕ್ಷಧಾರಗಳಿದ್ದಾರೆ ಕಾನೂನು ತನ್ನ ಕ್ರಮ ಕೈಗೊಳ್ಳಲಿ. ಇದಕ್ಕೆ ಕೇಂದ್ರ ಸಚಿವರ ವಿರೋಧವೂ ಇಲ್ಲ, ತಮ್ಮದೂ ತಕರಾರಿಲ್ಲ. ಆದರೆ, ಅನಗತ್ಯವಾಗಿ ಪ್ರಲ್ಹಾದ ಜೋಶಿ ಅವರ ಹೆಸರು ಎಳೆದು ತರುವುದನ್ನು ಸಹಿಸುವುದಿಲ್ಲ ಎಂದು ಮಹೇಶ ತೆಂಗಿನಕಾಯಿ ಎಚ್ಚರಿಸಿದರು.






