ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ವಿಜಯೇಂದ್ರ

Davanagere:

Font size:

ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ವಿಜಯೇಂದ್ರ

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರ ನೀಡಿದರು. ಬೆಳಗಾವಿಯಲ್ಲಿ ವಿಪಕ್ಷದ ವಿರೋಧವನ್ನೂ ಲೆಕ್ಕಿಸದೇ ವಿಪಕ್ಷದ ಬಾಯಿ ಮುಚ್ಚಿಸಲು ದ್ವೇಷ ಭಾಷಣ ಮಸೂದೆ ತಂದರು. ನಂತರ ಬೆಂಗಳೂರಿನಲ್ಲಿ ವಿಧಾನಸೌಧದ ಒಳಗೆ ಮಾಧ್ಯಮಗಳಿಗೆ ಪ್ರವೇಶವಿಲ್ಲ ಎಂದು ಮಾಧ್ಯಮದವರನ್ನು ಕೂಡ ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ ವಿರೋಧ ಇರುವುದು ಸಹಜ. ಆಡಳಿತ ನಡೆಸುವ ಸಚಿವರು, ಮುಖ್ಯಮಂತ್ರಿಗಳಿಗೆ ಸಹನೆ ಇರಬೇಕಾಗುತ್ತದೆ. ಸಮಾಜ ಯಾಕೆ ವಿರೋಧಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನೆಲ್ಲ ಬಿಟ್ಟು ಕೇಸು ದಾಖಲಿಸಿ ಬೆದರಿಸುವುದು, ಹುಬ್ಬಳ್ಳಿಯಲ್ಲಿ ಉದ್ಯೋಗಾವಕಾಶ ಮಾಡಿಕೊಡಿ ಎಂದು ಕೇಳಿ ಪ್ರತಿಭಟಿಸಿದರೆ ಲಾಠಿಚಾರ್ಜ್ ಮಾಡುತ್ತೀರಿ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ ಎಂದು ನುಡಿದರು.
ಅಧಿಕಾರ ಇದೆ ಎಂದು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಯ ಬಂದಾಗ ಬಡಿಗೆ ತೆಗೆದುಕೊಂಡು ಇವರಿಗೆ ಏನು ಮಾಡಬೇಕೋ ಅದನ್ನು ಮಾಡುತ್ತಾರೆ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಸಂದರ್ಭದಲ್ಲಿ ಶಾಂತಿಯುತ ಮೆರವಣಿಗೆ ನಡೆಯುತ್ತಿತ್ತು. ಅಲ್ಲಿ ಒಂದು ಧರ್ಮದ ದೇಶದ್ರೋಹಿಗಳು ಕಲ್ಲೆಸೆದಿದ್ದಾರೆ. ಕೋಮುಗಲಭೆ ಸೃಷ್ಟಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ನಂತರ ಟಿಪ್ಪು ಸುಲ್ತಾನ್ ಮನಸ್ಥಿತಿ ಇರುವವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ಸರಕಾರದ ಅಲ್ಪಸಂಖ್ಯಾತ ಓಲೈಕೆ ರಾಜಕಾರಣದಿಂದ ದೇಶದ್ರೋಹಿಗಳನ್ನು ಹೆಚ್ಚಿಸುತ್ತಿದೆ ಎಂದು ಆಕ್ಷೇಪಿಸಿದರು. ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಹೊನ್ನಾಳಿಯಲ್ಲಿ ಅತ್ಯಂತ ಯಶಸ್ವಿ ಜಾಗೃತಿ ಕಾರ್ಯಕ್ರಮ
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ವಿಬಿ ಜಿ ರಾಮ್ ಜಿ ಕಾರ್ಯಕ್ರಮದ ಜಾಗೃತಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು. ರಾಜ್ಯದೆಲ್ಲೆಡೆ ಜನಜಾಗೃತಿ ಕಾರ್ಯ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಜೀ ಅವರು ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಂದು ಗ್ರಾಮೀಣ ಭಾಗದ ಬಡವರು, ಕಾರ್ಮಿಕರಿಗೆ ಅನುಕೂಲ ಆಗಬೇಕು; ದಿನಗೂಲಿಯನ್ನು 370 ರೂ.ಗೆ ಏರಿಸಿದ್ದು, ವಾರ್ಷಿಕವಾಗಿ ಅವರಿಗೆ 45 ಸಾವಿರ ರೂ. ಹೆಚ್ಚು ಬರಲಿದೆ ಎಂದು ವಿವರಿಸಿದರು.
ಮನ್‍ರೇಗಾದಡಿ ಭ್ರಷ್ಟಾಚಾರ ನಡೆಯುತ್ತಿತ್ತು. ಒಳ್ಳೆಯ ಕೆಲಸ ಆಗುತ್ತಿರಲಿಲ್ಲ. ದೇಶಾದ್ಯಂತ ವಿಬಿ ಜಿ ರಾಮ್ ಜಿ ಯೋಜನೆಯಡಿ 85 ಸಾವಿರ ಕೋಟಿ ಖರ್ಚು ಮಾಡಬೇಕಾದರೆ, ಗ್ರಾಮೀಣ ಭಾಗದಲ್ಲಿ ಬಡವರಿಗೆ ಅನುಕೂಲ ಆಗಬೇಕು; ಅಲ್ಲದೇ ಗ್ರಾಮೀಣ ಭಾಗದಲ್ಲಿ ಕೇವಲ ಗುಂಡಿ ಅಗೆದು ಗುಂಡಿ ಮುಚ್ಚುವುದಕ್ಕಿಂತ ಹೆಚ್ಚಾಗಿ ಅಲ್ಲಿ ಒಂದು ಆಸ್ತಿ ನಿರ್ಮಾಣ ಆಗಿ ದುಡ್ಡು ಸದುಪಯೋಗ ಆಗಬೇಕೆಂಬ ಆಶಯ ಮೋದಿಜೀ ಅವರದು ಎಂದರು.

Prev Post “ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚು ಪ್ರಯೋಜನಕಾರಿಯಾಗುವಂತೆ ಬಜೆಟ್ ಮಂಡಿಸಿ” ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಗೌರವಾನ್ವಿತ ರಾಜ್ಯಪಾಲರು