ಖಂಡ್ರೆಗೆ ಮಾಹಿತಿ, ಜ್ಞಾನದ ಕೊರತೆ ಇದೆ; ನಾಳೆ, ನಾಡಿದ್ದು ನಾನು ದಾಖಲೆ ಸಮೇತ ಮಾಹಿತಿ ಕೊಡುತ್ತೇನೆ ಎಂದ HDK ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಅರಣ್ಯ ಒತ್ತುವರಿ ಜಾಗ ತೆರವು ಮಾಡಿಸಿಲ್ಲ ಯಾಕೆ, ಖಂಡ್ರೆಯವರೇ? ಮುಡಾ ಮೇಲೆ ಇಡಿ ದಾಳಿ; ಎಲ್ಲಾ ಸತ್ಯಮೇವ ಜಯತೇಗಳು ಹೊರಗೆ ಬರುತ್ತಿವೆ
ಚನ್ನಪಟ್ಟಣ/ರಾಮನಗರ: ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹೆಚ್ಎಂಟಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಚನ್ನಪಟ್ಟಣದಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು; ಸಚಿವ ಖಂಡ್ರೆ ಅವರಿಗೆ ಮಾಹಿತಿ ಮತ್ತು ಜ್ಞಾನದ ಕೊರತೆ ಇದೆ. ಅವರು ಭೇಟಿ ನೀಡಿರುವ ಜಾಗವು 2002ರಲ್ಲಿಯೇ ಕೆನರಾ ಬ್ಯಾಂಕಿಗೆ ನೀಡಲಾಗಿದೆ. ಸಚಿವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ನಾಳೆ ಅಥವಾ ನಾಡಿದ್ದು ಎಲ್ಲಾ ದಾಖಲೆಗಳ ಸಮೇತ ನಾನು ನಿಮ್ಮ (ಮಾಧ್ಯಮಗಳು) ಮುಂದೆ ಮಾತನಾಡುತ್ತೇನೆ ಎಂದರು.
ಚಿಕ್ಕಮಗಳೂರು, ಕೊಡಗು, ಬೆಂಗಳೂರು ಸೇರಿದಂತೆ ಅನೇಕ ಕಡೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿ ಆಗಿದೆ. ಅದನ್ನೆಲ್ಲ ತೆರವು ಮಾಡುವುದು ಬಿಟ್ಟು ಅರಣ್ಯ ಸಚಿವರು ಹೆಚ್ ಎಂಟಿ ಮೇಲೆ ಮಾತ್ರ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಟಾಂಗ್ ಕೊಟ್ಟರು.
ಮಾಜಿ ಸ್ಪೀಕರ್ ಒತ್ತುವರಿ ಜಾಗ ತೆರವು ಮಾಡಿಸಿಲ್ಲ ಯಾಕೆ?
ಕೋಲಾರದ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಒಬ್ಬರು ಒತ್ತುವರಿ ಮಾಡಿರುವ ಅರಣ್ಯ ಭೂಮಿಯನ್ನು ತೆರವು ಮಾಡಿಸುವ ಧೈರ್ಯವನ್ನು ಅರಣ್ಯ ಸಚಿವರು ತೋರಿಸಲಿ. ಒತ್ತುವರಿ ತೆರವು ಮಾಡಿಸುವಂತೆ ನ್ಯಾಯಾಲಯ ಆದೇಶ ಕೊಟ್ಟಿವೆ. ಅರಣ್ಯ ಇಲಾಖೆ, ಕೋಲಾರ ಜಿಲ್ಲಾಧಿಕಾರಿಗೆ ನೋಟಿಸ್ ಕೊಟ್ಟಿದೆ. ಆದರೂ ಮಾಜಿ ಸ್ಪೀಕರ್ ಒತ್ತುವರಿ ಜಾಗವನ್ನು ಯಾಕೆ ತೆರವು ಮಾಡುತ್ತಿಲ್ಲ, ಹೇಳಿ ಈಶ್ವರ ಖಂಡ್ರೆ ಅವರೇ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಶ್ರೀನಿವಾಸಪುರದಲ್ಲಿ 120 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. 61 ಎಕರೆಯನ್ನು ಸರ್ವೆ ಮಾಡಿ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಿ ಎಂದು ನ್ಯಾಯಾಲಯದ ಆದೇಶ ಆಗಿದೆ. ಆ ಒತ್ತುವರಿ ಭೂಮಿ ವಿಷಯದಲ್ಲಿ ಅರಣ್ಯ ಸಚಿವರು ಅಧಿಕಾರಿಗಳಿಗೆ ಏನು ಸೂಚನೆ ಕೊಟ್ಟಿದ್ದಾರೆ ಅಂತ ಗೊತ್ತು. ಆ ವಿಚಾರದಲ್ಲಿ ಈಶ್ವರ್ ಖಂಡ್ರೆ ಏನ್ ಮಾಡ್ತಿದ್ದೀಯಪ್ಪ? ಬಡವರಿಗೆ ಒಂದು ನ್ಯಾಯ, ಕಾಂಗ್ರೆಸ್ನವರಿಗೆ ಒಂದು ನ್ಯಾಯವಾ? ಎಂದು ಖಾರವಾಗಿ ಪ್ರಶ್ನಿಸಿದರು ಕೇಂದ್ರ ಸಚಿವರು.
ನೀವು ಯಾರಿಗೆ ರಕ್ಷಣೆ ಕೊಡುತ್ತಿದ್ದೀರಿ ಹೇಳಿ ಸಚಿವರೇ.. ಅರಣ್ಯ ಭೂಮಿಗೆ ರಕ್ಷಣೆ ಕೊಡುತ್ತಿದ್ದೀರೋ ಅಥವಾ ಒತ್ತುವರಿ ಮಾಡಿಕೊಂಡವರಿಗೆ ರಕ್ಷಣೆ ಕೊಡುತ್ತಿದ್ದೀರೋ?
ಎಲ್ಲದರ ಬಗ್ಗೆ ಮುಂದೆ ಸಮಗ್ರವಾಗಿ ಮಾಹಿತಿ ಕೊಡುತ್ತೇನೆ. ಎಚ್ಎಂಟಿ ಆವರಣಕ್ಕೆ ಈಶ್ವರ್ ಖಂಡ್ರೆ ಅತಿಕ್ರಮ ಪ್ರವೇಶ ಮಾಡಿದ್ದಾರೆ.
ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದೆ.
ಅದರ ತೀರ್ಪಿಗಾಗಿ ಕಾಯುತ್ತಿದ್ದೇವೆ.
ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ಪ್ರಚಾರಕ್ಕಾಗಿ ಈ ವಿಚಾರ ತೆಗೆದುಕೊಳ್ಳಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಮುಡಾ ದಾಖಲೆಗಳೇ ಮಂಗಮಾಯ!!
ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಕಂದ್ರ ಸಚಿವ ಕುಮಾರಸ್ವಾಮಿ ಅವರು; ಕಳೆದ ನಾಲ್ಕೈದು ವಾರಗಳಿಂದ ಹಲವಾರು ವ್ಯಕ್ತಿಗಳ ಮೇಲೆ ದಾಳಿ ನಡೆದಿದೆ. ಸಾಕಷ್ಟು ವಿಚಾರಗಳು ಹೊರಗಡೆ ಬರುತ್ತಿವೆ. ದಾಖಲೆಗಳು ಕಳ್ಳತನ ಆಗಿವೆ, ಮಂಗಮಾಯ ಆಗಿವೆ ಎಂದು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಸತ್ಯ ಮೇವ ಜಯತೆ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಜಾಹೀರಾತಿನಲ್ಲಿ ನೋಡಿದರೂ ಸತ್ಯಮೇವ ಜಯತೇ, ಭಾಷಣದಲ್ಲಿ ನೋಡಿದರೂ ಸತ್ಯಮೇವ ಜಯತೇ!! ಈಗ ಎಲ್ಲಾ ಸತ್ಯ ಮೇವ ಜಯತೆ ಹೊರಗಡೆ ಬರುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.






