ನಿಖಿಲ್ ಕಟ್ಟಿ ಹಾಕಲು ದಂಡೆತ್ತಿ ಬಂದಿರುವ ಸಚಿವರು; ಕಾಂಗ್ರೆಸ್ ಮೇಲೆ HDK ವಾಗ್ದಾಳಿ ಜನ ನಮ್ಮ ಜತೆ ಇದ್ದಾರೆ, ಸಚಿವರ ಆಟ ನಡೆಯಲ್ಲ ಎಂದ ಕೇಂದ್ರ ಸಚಿವರು
ಚನ್ನಪಟ್ಟಣ/ರಾಮನಗರ: ಕೇವಲ ಒಬ್ಬ ಯುವಕನನ್ನು ಕಟ್ಟಿ ಹಾಕಲು ಚನ್ನಪಟ್ಟಣದಲ್ಲಿ ಸರಕಾರದ ಸಚಿವರ ದಂಡು ದಂಡೆತ್ತಿ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಚಾರದ ನಡುವೆ ಕಲ್ಲಾಪುರ ಗ್ರಾಮದಲ್ಲಿ ಭಾಷಣ ಮಾಡಿದ ಕೇಂದ್ರ ಸಚಿವರು; 13ನೇ ತಾರೀಕು ನಡೆಯುವ ಉಪಚುನವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕಣದಲ್ಲಿ ಇದ್ದಾರೆ. ಅವರನ್ನು ಕಟ್ಟಿ ಹಾಕಲು ಮುಖ್ಯಮಂತ್ರಿ ಡಿಸಿಎಂ ಕೂಡ ಬಂದಿದ್ದಾರೆ, ಹದಿನೈದಕ್ಕೂ ಹೆಚ್ಚು ಸಚಿವರು, ಮೂವತ್ತಕ್ಕೂ ಹೆಚ್ಚು ಶಾಸಕರು ದಂಡೆತ್ತಿ ಬಂದಿದ್ದಾರೆ. ಆದರೆ, ಜನರು ನಮ್ಮ ಜತೆ ಇದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಕ್ಕೆ ನಾನು ಮಾಡಿರುವ ಕೆಲಸಗಳ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಾರೆ. ಅವರಿಗೆ ಕಣ್ಣಿಲ್ಲವೇ? ಪ್ರತಿ ಹಳ್ಳಿಯಲ್ಲಿಯೂ 8ರಿಂದ 10 ಕೋಟಿ ಮೌಲ್ಯದ ಅಭಿವೃದ್ದಿ ಕಾರ್ಯಗಳು ಆಗಿವೆ. ಇವೆಲ್ಲವನ್ನೂ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮಾಡಿರುವ ಕೆಲ್ಸ ಕಣ್ಣಿಗೆ ಕಾಣಲ್ಲವೇ?
ಕಾಂಕ್ರೀಟ್ ರೋಡ್, ಹೈಮಾಸ್ಕ್ ಲೈಟ್ ಕೊಟ್ಟಿದ್ದೇನೆ ಸೇರಿದಂತೆ ಸಾಕಷ್ಟು ಮೂಲ ಸೌಕರ್ಯ ಕಲ್ಪಿಸಿದ್ದೇನೆ. ಬೆಂಗಳೂರಿನಲ್ಲೂ ಇಂತಹ ಉತ್ತಮ ರಸ್ತೆಗಳು ಇಲ್ಲ. ಕೇವಲ 8-10 ಹಳ್ಲಿಗೆ ಅಷ್ಟೇ ಕೆಲಸ ಆಗಿಲ್ಲ. ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಿದೆ. ಎಷ್ಟು ಕೊಳವೆ ಬಾವಿ ಕೊಟ್ಟಿದ್ದೇವೆ ಎನ್ನುವುದಕ್ಕೆ ಲೆಕ್ಕ ಇದೆ. ಇವರ ಕಥೆ ಹೇಳುವ ಹಾಗೆಯೇ ಇಲ್ಲ. ದಲಿತ ಸಮುದಾಯದ ಅಭಿವೃದ್ಧಿಗೆ ಇಟ್ಟ ಹಣವನ್ನು ಗ್ಯಾರಂಟಿಗೆ ಹಾಕೊಂಡಿದ್ದಾರೆ. ಹೊಸದಾಗಿ ₹1.05 ಲಕ್ಷ ಕೋಟಿ ಸರ್ಕಾರ ಸಾಲ ಮಾಡಿ ಜನರ ಮೇಲೆ ಹೊರೆ ಹಾಕುತ್ತಿದೆ. ಇದನ್ನು ಸೇರಿಸಿದರೆ ರಾಜ್ಯದ ಒಟ್ಟು ಸಾಲ 7.5. ಲಕ್ಷ ಕೋಟಿ ಆಗುತ್ತದೆ. ಅದನ್ನು ತೀರಿಸೋಕೆ ಜನರ ಜೇಬಿಗೆ ಕೈ ಹಾಕುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ನಿಮ್ಮನ್ನು ಲೂಟಿ ಮಾಡಿ ₹2000 ಕೊಟ್ರೆ ಉಪಯೋಗ ಏನು?
ಈಗ ಟಿಸಿ ಹಾಕಿಸೋಕೆ 2.5 ಲಕ್ಷ ಬೇಕು. ಜನರ ದುಡ್ಡು ಕಿತ್ಕೊಂಡು 2 ಸಾವಿರ ಕೊಟ್ಟರೆ ಏನು ಪ್ರಯೋಜನ? ಮುಂದೆ ಈ ಸರ್ಕಾರ ದಿವಾಳಿ ಆಗೋದ್ರಲ್ಲಿ ಅನುಮಾನ ಇಲ್ಲ. ರಸ್ತೆ ಗುಂಡಿ ಮುಚ್ಚೋಕೆ ಕೂಡ ಇವರ ಬಳಿ ಹಣ ಇಲ್ಲ. ಹಾಲಿನ ಪ್ರೋತ್ಸಾಹ ಧನ ಕೊಟ್ಟು ಎಷ್ಟು ದಿನ ಆಯಿತು? ಪಶು ಆಹಾರ ಖರೀದಿ ಮಾಡಬೇಕು ಎಂದರೆ ರೈತರ ಕಷ್ಟ ಎಷ್ಟಿದೆ? ಜನರ ದುಡ್ಡನ್ನೇ ಜನರಿಗೆ ಗೆ ಕೊಡದೆ ಹೋದರೆ ಹೇಗೆ ಬದುಕೋದು? ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಯೋಗೇಶ್ವರ್ ಟೋಪಿ ಹಾಕಿ ಹೋದರು
ಯೋಗೇಶ್ವರ್ ಅವರಿಗೆ ಜೆಡಿಎಸ್ ನಿಂದ ಕೊಟ್ಟರೂ ನಿಲ್ಲುತ್ತೇನೆ ಎಂದರು. ನಾವು ಕೊಡುತ್ತೇವೆ ಎಂದೆವು. ಆಮೇಲೆ ಬಿಜೆಪಿ ಟಿಕೆಟ್ ಬೇಕು ಎಂದರು. ಅದಕ್ಕೂ ನಾವು ಒಪ್ಪಿಕೊಂಡೆವು. ಸ್ವತ ಜೆಪಿ ನಡ್ಡಾ ಅವರೇ ನಿಮ್ಮ ಪಕ್ಷದಿಂದಲೇ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಿ ಎಂದು ಕೇಳಿದರು. ನಾವು ಒಪ್ಪಿಕೊಂಡೆವು. ಆಮೇಲೆ ಈ ವ್ಯಕ್ತಿ ಜೆಡಿಎಸ್ ಟಿಕೆಟ್ ಮೇಲೆ ನಿಲ್ಲಲ್ಲ ಅಂದರು. ಸಂಸದ ಡಾ.ಮಂಜುನಾಥ್ ಅವರು ಬಿಜೆಪಿ ಪಕ್ಷದಿಂದಲೇ ನಿಲ್ಲಿಸಿ ಎಂದರು. ಅದಕ್ಕೂ ಒಪ್ಪಿದೆ. ಆಮೇಲೆ ಇವರು ಹೇಳದೆ ಕೇಳದೆ ಕಾಂಗ್ರೆಸ್ ಪಕ್ಷಕ್ಕೆ ಹಾರಿದರು ಎಂದು ಕುಮಾರಸ್ವಾಮಿ ಕಿಡಿಕಾರಿದರು.
ನನ್ನಿಂದ ನಿಮಗೆ ಅನ್ಯಾಯ ಆಗಿಲ್ಲ. ಒಬ್ಬ ರೈತನ ಜಮೀನಲ್ಲಿ ಇದ್ದ ಬಂಡೆ ಹೊಡೆದು ಅವನಿಗೆ ಅನ್ಯಾಯ ಮಾಡಿದರು ಅವರು ಎಂದು ಡಿಕೆ ಸಹೋದರರ ಮೇಲೆ ಹರಿಹಾಯ್ದ ಅವರು; ನಾನು ಅವರ ಹಾಗೆ ಮಾಡಿಲ್ಲ. ನಿಖಿಲ್ ಕುಮಾರಸ್ವಾಮಿ ಒಂದು ಅವಕಾಶ ಕೊಡಿ. ಈ ಕೆಟ್ಟ ಕಾಂಗ್ರೆಸ್ ಆಡಳಿತಕ್ಕೆ ಅಂಕುಶ ಹಾಕಬಹುದು ಎಂದು ಮನವಿ ಮಾಡಿದರು.
ಅವಳಿ ನಗರ ಕನಸು ಶೀಘ್ರ ನನಸು
ಚನ್ನಪಟ್ಟಣ - ರಾಮನಗರ ಅವಳಿ ನಗರ ಆಗುವ ದಿನಗಳು ದೂರವಿಲ್ಲ. ಬೃಹತ್ ಕಾರ್ಖಾನೆ ತಂದು ಸ್ಥಳೀಯ ಯುವ ಜನರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ. ಈ ಬಗ್ಗೆ ನಾನು ಹಲವರ ಜತೆ ಸಮಾಲೋಚನೆ ನಡೆಸಿದ್ದೇನೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಭಾಗದಲ್ಲಿ ಕೈಗಾರಿಕೆಗಳನ್ನು ತರುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಆನೆ ಕಾಟಕ್ಕೆ ತಾಲ್ಲೂಕಿನ ಜನರನ್ನು ಪಾರು ಮಾಡುಲು ತಡೆಗೋಡೆ ನಿರ್ಮಿಸಲು ರೈಲ್ವೆ ಸಚಿವರ ಮಾತನಾಡಿದ್ದೇನೆ. ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನದು ಜವಾಬ್ದಾರಿ ಇದೆ ಎಂದು ಅವರು ಹೇಳಿದರು.
ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕರು ಸಚಿವರ ಜತೆಯಲ್ಲಿ ಇದ್ದರು.






