ಎಕ್ಸಿಟ್ ಪೋಲ್ ಗಳು ತಲೆಕೆಳಗಾಗುತ್ತವೆ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ

Murudeswara:

Font size:

"ನಿಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳೆಲ್ಲಾ ತಲೆಕೆಳಗಾಗುತ್ತವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುರುಡೇಶ್ವರ, ನ. 22:

"ನಿಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳೆಲ್ಲಾ ತಲೆಕೆಳಗಾಗುತ್ತವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಮರಳುವ ಮುನ್ನ ಮುರುಡೇಶ್ವರ ಗಾಲ್ಫ್ ಕ್ಲಬ್ ನ ಹೆಲಿಪ್ಯಾಡ್ ಬಳಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಉಪಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗುತ್ತಿದ್ದು, ಮಹಾರಾಷ್ಟ್ರದ ಚುನಾವಣೋತ್ತರ ಸಮೀಕ್ಷೆ ಕುರಿತು ಬಗ್ಗೆ ಕೇಳಿದಾಗ, "ನಾವು ಅಲ್ಲಿಯೂ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸವಿದೆ. ನನಗೆ ಆ ರಾಜ್ಯದ ಬಗ್ಗೆ ಹೆಚ್ಚು ಚಿತ್ರಣವಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾನು ಕೂಡ ಪ್ರಚಾರಕ್ಕೆ ಹೋಗಿದ್ದೆ, ಆಗ ಕಾಂಗ್ರೆಸ್ ಪರ ಅಲೆ ಕಂಡಿತು. ಆದರೆ ಮತ ಪೆಟ್ಟಿಗೆಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಜಾರ್ಖಂಡ್ ಬಗ್ಗೆ ಗೊತ್ತಿಲ್ಲ" ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಗೆಲುವು ಖಂಡಿತ

ಎಲ್ಲಾ ಎಕ್ಸಿಟ್ ಪೋಲ್ ಗಳು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಸೋಲು ಹಾಗೂ ಜಮೀರ್ ಅವರ ಮೈ ಬಣ್ಣ ಹೇಳಿಕೆ ಪರಿಣಾಮ ಬೀರಿದೆ ಎನ್ನುವ ಬಗ್ಗೆ ಕೇಳಿದಾಗ, "ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 16 ಸಾವಿರ ಮತಗಳು ಮಾತ್ರ ದೊರೆತಿದ್ದವು. ಆದರೆ ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸ ನನಗಿದೆ. ರಾಮನಗರದಲ್ಲಿ ಇಕ್ಬಾಲ್ ಹುಸೇನ್, ಮಾಗಡಿಯಲ್ಲಿ ಬಾಲಕೃಷ್ಣ, ಕನಕಪುರದಲ್ಲಿ ನಾನು ಗೆದ್ದಿದ್ದೆವು. ಚನ್ನಪಟ್ಟಣದಲ್ಲಿ ಮಾತ್ರ ಗೆದ್ದಿರಲಿಲ್ಲ. ಈ ಬಾರಿ ಗೆಲುವು ಖಂಡಿತ" ಎಂದರು.

ಜಮೀರ್ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ

ಕುಮಾರಸ್ವಾಮಿ ಅವರ ಮೈ ಬಣ್ಣದ ಬಗ್ಗೆ ಮಾತನಾಡಿದ ಸಚಿವ ಜಮೀರ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಅವರ ಹೇಳಿಕೆ ಕುರಿತು ಪಕ್ಷದೊಳಗೆ ಅಸಮಾಧಾನ ಇರುವ ಬಗ್ಗೆ ಕೇಳಿದಾಗ, "ಜಮೀರ್ ಅವರು ಉತ್ತಮ ಕೆಲಸಗಾರ. ಇದು ಪಕ್ಷದ ಆಂತರಿಕ ವಿಚಾರ. ಅವರಿಗೆ ಈ ಬಗ್ಗೆ ಬುದ್ದಿ ಹೇಳಲಾಗಿದೆ. ಅವರು ಆತುರವಾಗಿ ಒಂದಷ್ಟು ಹೇಳಿಕೆ ಕೊಟ್ಟಿದ್ದಾರೆ. ಇದು ತಪ್ಪು ಎಂದು ನಾವು ಹೇಳಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ನಾನೇ ಅವರಿಗೆ ಬುದ್ಧಿ ಹೇಳಿದ್ದೇನೆ. ನನ್ನ ಹೊರತಾಗಿ ಮತ್ತಿನ್ಯಾರು ಅವರಿಗೆ ಬುದ್ಧಿವಾದ ಹೇಳಬೇಕು? ಜಮೀರ್ ಅವರು ಈಗಾಗಲೇ ಅವರ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ" ಎಂದರು.

ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಚರ್ಚೆ

"ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಕುರಿತು ಮುಖ್ಯಮಂತ್ರಿಗಳು ಹಾಗೂ ಸಚಿವರಾದ ಎಚ್.ಕೆ. ಪಾಟೀಲ್ ಅವರ ಬಳಿ ಚರ್ಚೆ ಮಾಡಲಾಗುವುದು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಕರಾವಳಿಯ ಪ್ರಕೃತಿ ಸಂಪತ್ತು ಸದ್ಭಳಕೆಯಾಗಬೇಕು. ಬಂಡವಾಳ ಹೂಡಿಕೆದಾರರು ಬಂದರೆ ಉತ್ತಮ ರೀತಿಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ" ಎಂದರು.

"ನಾನು 15-20 ವರ್ಷಗಳ ಹಿಂದೆ ಬ್ಯಾಂಕಾಕಿಗೆ ಹೋಗಿದ್ದ ವೇಳೆ ಗಮನಿಸಿದಂತೆ ಅಲ್ಲಿನ ಯುವಕರಿಗಿಂತ ನಮ್ಮ ಕರಾವಳಿಯ ಹುಡುಗರು ಹೆಚ್ಚು ಕ್ರಿಯಾಶೀಲವಾಗಿದ್ದಾರೆ. ಇಲ್ಲಿ ಅಂತರರಾಷ್ಟೀಯ ಮಟ್ಟದ ಅನುಕೂಲತೆ ನೀಡುವಂತಹ ವಾತಾವರಣ ಇದೆ. ಈ ಕಾರಣಕ್ಕಾಗಿ ಇಲ್ಲಿ ಉಳಿದುಕೊಂಡು ಅನುಕೂಲತೆಗಳನ್ನು ವೀಕ್ಷಣೆ ಮಾಡಿದೆ" ಎಂದರು.

"ಇಲ್ಲಿನ ಸಮುದ್ರ ಕಿನಾರೆಗಳು ಗೋವಾಕ್ಕಿಂತ ಹೆಚ್ಚು ಸುಂದರವಾಗಿವೆ. ಅದಕ್ಕಾಗಿ ಸ್ವತಃ ಕಣ್ಣಾರೆ ನೋಡಲು ಬಂದೆ. ನಾನು ಕಿವಿಗಳಿಗಿಂತ ಹೆಚ್ಚು ಕಣ್ಣನ್ನು ನಂಬುತ್ತೇನೆ. ಸ್ಕೂಬಾ ಡೈವಿಂಗ್ ಮಾಡಿದೆ. ಮೀನುಗಾರಿಕೆ ಸಚಿವರಾದ ಮಾಂಕಾಳ ವೈದ್ಯ, ಶಾಸಕ ಭೀಮಣ್ಣ ನಾಯ್ಕ ಇದ್ದರು" ಎಂದರು.

ಸಂಪುಟ ವಿಸ್ತರಣೆಯ ಬಗ್ಗೆ ಊಹಾಪೋಹಗಳು ಹರಡಿರುವ ಬಗ್ಗೆ ಕೇಳಿದಾಗ, "ನಾನು ಮುಖ್ಯಮಂತ್ರಿ ಅಲ್ಲ, ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿ. ಅವರು ಇದರ ಬಗ್ಗೆ ಉತ್ತರ ಹೇಳುತ್ತಾರೆ" ಎಂದರು.

Prev Post ಬೈಕ್ ಶೋ ರೂಮ್ ಬೆಂಕಿ ಅವಘಡದಲ್ಲಿ ಮೃತಪಟ್ಟ ಪ್ರಿಯಾ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ ದಿನೇಶ್ ಗುಂಡೂರಾವ್
Next Post ಮಂಡ್ಯದಲ್ಲಿ ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬ ಆಚರಣೆ ಕಾಯಕಯೋಗಿಗಳಿಗೆ ಬಸವಶ್ರೀ ಪುರಸ್ಕಾರ, ಸಂವಿಧಾನ ಪುಸ್ತಕ ವಿತರಣೆ