ಇನ್ವೆಸ್ಟ್‌ ಕರ್ನಾಟಕ ರೋಡ್‌ಷೋದ ಅಂಗವಾಗಿ ಲಂಡನ್‌ನಲ್ಲಿ ಅಲ್ಲಿನ ಸಚಿವರ ಜತೆ ಸರಣಿ ಸಭೆ

LONDON:

Font size:

‘ಕ್ವಿನ್‌ ಸಿಟಿ’ಯಲ್ಲಿ ಇಂಗ್ಲೆಂಡ್‌ ವಿವಿಗಳ ಒಲವು : ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

ಲಂಡನ್ :  ʼಯೂನಿವರ್ಸಿಟಿ ಆಫ್ ಲಿವರ್‌ಪೂಲ್, ಯುನಿವರ್ಸಿಟಿ ಆಫ್ ಈಸ್ಟ್ ಲಂಡನ್, ಯಾರ್ಕ್ ಯೂನಿವರ್ಸಿಟಿ ಮತ್ತು ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾನಿಲಯಗಳಂತಹ ಗೌರವಾನ್ವಿತ ಸಂಸ್ಥೆಗಳ ಪ್ರತಿನಿಧಿಗಳು ರಾಜ್ಯ ಸರ್ಕಾರದ ʼಕ್ವಿನ್‌ ಸಿಟಿʼ ಯೋಜನೆಯಲ್ಲಿ ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದಾರೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.

ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ – ʼಇನ್ವೆಸ್ಟ್‌ ಕರ್ನಾಟಕʼದ ಪೂರ್ವಭಾವಿ ಸಿದ್ಧತೆಗಳ ಅಂಗವಾಗಿ   ಸಚಿವ  ಪಾಟೀಲ ಅವರು  ಲಂಡನ್‌ನಲ್ಲಿ ಇಂಗ್ಲೆಂಡ್‌ನ   ಉದ್ಯಮಿಗಳು ಮತ್ತು  ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಸರಣಿ ಸಭೆ ನಡೆಸಿದರು.

ಜಾಗತಿಕ ಶಿಕ್ಷಣ ಕೇಂದ್ರವಾಗಿ ಕರ್ನಾಟಕವು ಅಭಿವೃದ್ಧಿ ಹೊಂದುತ್ತಿರುವುದನ್ನು ಈ ಸಮಾಲೋಚನೆಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಅಸ್ತಿತ್ವಕ್ಕೆ ಬರುತ್ತಿರುವ  ಮಹತ್ವಾಕಾಂಕ್ಷಿ ʼಕ್ವಿನ್‌ ಸಿಟಿʼಯ ವ್ಯಾಪ್ತಿಯೂ ಸೇರಿದಂತೆ  ರಾಜ್ಯದಾದ್ಯಂತ ಇಂಗ್ಲೆಂಡ್‌ ಮೂಲದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್‌ ಆರಂಭಿಸಲು ವಿಪುಲ ಅವಕಾಶಗಳು ಇರುವುದನ್ನು ಸಚಿವರು ಮನದಟ್ಟು ಮಾಡಿಕೊಟ್ಟರು.

ಕರ್ನಾಟಕದ ಉದ್ದಿಮೆ ಸ್ನೇಹಿ ಪರಿಸರ, ವಿಶ್ವ ದರ್ಜೆಯ ಮೂಲಸೌಲಭ್ಯ ಮತ್ತು ಹೂಡಿಕೆದಾರ-ಸ್ನೇಹಿ ನೀತಿಗಳನ್ನು ಪ್ರಮುಖವಾಗಿ ಬಿಂಬಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಲಿರುವ  ಇನ್ವೆಸ್ಟ್‌ ಕರ್ನಾಟಕದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು. ಆರ್ಥಿಕ ಸಹಕಾರ ವೃದ್ಧಿಸಲು ಮತ್ತು  ರಾಜ್ಯದಲ್ಲಿ ವಹಿವಾಟು ವಿಸ್ತರಿಸಲು ಜಾಗತಿಕ ಹೂಡಿಕೆದಾರರ ಸಮಾವೇಶ ನೆರವಾಗಲಿದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

ಇಂಗ್ಲೆಂಡ್‌ನ ಸಣ್ಣ  ಉದ್ದಿಮೆ ಹಾಗೂ ರಫ್ತು ಸಚಿವ ಗರೆಥ್ ಥಾಮಸ್, ಬ್ರಿಟನ್ನಿನ ಡೆಪ್ಯುಟಿ ಹೈಕಮಿಷನರ್‌  ಹಾಗೂ  ಇಂಗ್ಲೆಂಡ್‌ ಭಾರತ ವಹಿವಾಟು ಮಂಡಳಿಯ (ಯುಕೆಐಬಿಸಿ) ಪ್ರತಿನಿಧಿಗಳಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳನ್ನು ಸಚಿವ ಪಾಟೀಲ ಅವರು ವಿವರಿಸಿದ್ದಾರೆ.

ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಎಂಬಿಡಿಎ, ಸಲಹಾ ಸಂಸ್ಥೆ ಸ್ಕ್ರಮ್‌ ಕನೆಕ್ಟ್  ಹಾಗೂ ರಸೆಲ್‌ ಗ್ರೂಪ್‌ ಆಫ್‌ ಯುಕೆ ಯುನಿವರ್ಸಿಟೀಸ್‌ನ ಪ್ರತಿನಿಧಿಗಳು ಸೇರಿದಂತೆ ಬ್ರಿಟನ್ನಿನ ಪ್ರಮುಖ ಕೈಗಾರಿಕೋದ್ಯಮಿಗಳ ಜೊತೆ  ಪ್ರತ್ಯೇಕವಾಗಿ ದುಂಡು ಮೇಜಿನ ಸಭೆಗಳನ್ನು ನಡೆಸಿತು.
ಉದ್ಯಮ ಪ್ರಮುಖ ಜೊತೆಗಿನ ಸಭೆ- ಸಮಾಲೋಚನೆಗಳಲ್ಲಿ   ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಅವರು ಭಾಗಿಯಾಗಿದ್ದರು.

ಮುಂದಿನ ವರ್ಷದ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ʼಇನ್ವೆಸ್ಟ್ ಕರ್ನಾಟಕ 2025ʼವು ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಪ್ರಮುಖ ತಾಣವಾಗಿ ವಿಶ್ವಕ್ಕೆ ಪ್ರದರ್ಶಿಸಲು, ಪಾಲುದಾರಿಕೆ ಉತ್ತೇಜಿಸಲು ಮತ್ತು ಕೈಗಾರಿಕೆಗಳಾದ್ಯಂತ ನಾವೀನ್ಯತೆಗೆ ಚಾಲನೆ ನೀಡುವ ಗುರಿ  ಹೊಂದಿದೆ.

Prev Post ಸ್ವಾಮೀಜಿಯವರನ್ನು ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ
Next Post ಸಹಕಾರ ಸಚಿವ ಕೆ ಎನ್ ರಾಜಣ್ಣನವರ ನೇತೃತ್ವದಲ್ಲಿ ಸ್ವಾಭಿಮಾನಿ ಸಮಾವೇಶ ಪೂರ್ವ ಸಿದ್ದತಾ ಸಭೆ