ಬಿಡದಿ ಪಾದಯಾತ್ರೆ ನಡುವೆ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಸವಾಲು
ದೇವನಹಳ್ಳಿಯಲ್ಲಿ ಡಿನೋಟಿಫಿಕೇಷನ್ ಮಾಡಿದ ಸಿದ್ದರಾಮಯ್ಯ ಜೈಲಿಗೆ ಹೋದ್ರಾ?"
ಬಿಡದಿ ಪಾದಯಾತ್ರೆ ನಡುವೆ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಸವಾಲು
"ರಿಯಲ್ ಎಸ್ಟೇಟ್ ಕಂಪನಿಯ ಜೊತೆ ಕಮಿಷನ್ ಪಡೆಯಲು ಯೋಜನೆ ಮಾಡುತ್ತಿದ್ದೀರಾ?"
ರಾಮನಗರ: "ಮಾತೆತ್ತಿದರೆ ಕುಮಾರಣ್ಣ ಕಾಲದಲ್ಲಿ ರೆಡ್ ಜೋನ್ ಆಯ್ತು ಅಂತಾರೆ. ಡಿನೋಟಿಫಿಕೇಷನ್ ಮಾಡಿ ನಾನು ಜೈಲಿಗೆ ಹೋಗಲ್ಲ ಅಂತ ಸಿಎಂ ಹೇಳುತ್ತಾರೆ. ಆದರೆ ದೇವನಹಳ್ಳಿಯಲ್ಲಿ ನಿಮ್ಮ ಸರ್ಕಾರದ ಸಿಎಂ ಸಿದ್ದರಾಮಯ್ಯ ಡಿನೋಟಿಫಿಕೇಷನ್ ಮಾಡಿದರಲ್ಲವಾ? ಅವರು ಜೈಲಿಗೆ ಹೋದ್ರಾ?" ಎಂದು ನಿಖಿಲ್ ಕುಮಾರಸ್ವಾಮಿ ಸಿಎಂ ವಿರುದ್ಧ ಕಿಡಿಕಾರಿದರು.
"ಈಗ ನೀವು ಡಿನೋಟಿಫಿಕೇಷನ್ ಮಾಡಿದರೆ ಮಾತ್ರ ಜೈಲಿಗೆ ಹೋಗ್ತೀರಾ?" ಎಂದು ಮುಖ್ಯಮಂತ್ರಿಗೆ ನಿಖಿಲ್ ಕುಮಾರಸ್ವಾಮಿ ನೇರ ಸವಾಲು ಹಾಕಿದರು.
"ಈ ಯೋಜನೆಯನ್ನು ಸರ್ಕಾರ ಪ್ರತಿಷ್ಠೆಗೆ ತೆಗೆದುಕೊಂಡು ಮಾಡುತ್ತಿದೆ. ಇದರಲ್ಲಿ ಸಾರ್ವಜನಿಕರ ಹಿತಾಸಕ್ತಿ ಇಲ್ಲ. ರೈತರ ಅನುಮತಿ ಪಡೆಯದೇ ಯೋಜನೆ ಮಾಡಲು ಮುಂದಾಗಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
"ಇಲ್ಲಿನ ಶೇ 81 ರಷ್ಟು ಸಣ್ಣ ರೈತರಿಗೆ ಇದರಿಂದ ತೊಂದರೆಯಾಗಲಿದೆ. ಇಲ್ಲಿಯ ರೈತರು ತಿಂಗಳಿಗೆ 6 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಸರ್ಕಾರ ಏಕಾಏಕಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ಯಾವ ಕಾರಣಕ್ಕೆ?" ಎಂದು ನಿಖಿಲ್ ಪ್ರಶ್ನಿಸಿದರು.
"ಸಾಲ ತೆಗೆದುಕೊಂಡು ಪ್ರಾಜೆಕ್ಟ್ ಮಾಡುವುದು ಯಾರ ಉದ್ಧಾರಕ್ಕೆ? ರಿಯಲ್ ಎಸ್ಟೇಟ್ ಕಂಪನಿಯ ಜೊತೆ ಕಮಿಷನ್ ಪಡೆಯಲು ಯೋಜನೆ ಮಾಡುತ್ತಿದ್ದೀರಾ? ಏನೇ ಯೋಜನೆ ಮಾಡಿದರೂ ಸಿಎಂ 30 ಸಾವಿರ ಕೋಟಿ ವೆಚ್ಚದ್ದೇ ಮಾಡುತ್ತಾರೆ. ಸುರಂಗ ರಸ್ತೆ, ಕಸದ ಟೆಂಡರ್ ಎಲ್ಲಾ 30 ಸಾವಿರ ಕೋಟಿ ಯೋಜನೆಗಳು. ಅದಕ್ಕಿಂತ ಕಮ್ಮಿ ನಮ್ಮ ಸಿಎಂ ಮುಟ್ಟೋದೆ ಇಲ್ಲ" ಎಂದು ನಿಖಿಲ್ ವ್ಯಂಗ್ಯವಾಡಿದರು.
"ಇಂದಿನ ಹೋರಾಟ ಕೇವಲ ಆರಂಭ. ಮುಂದೆ ಎಂತಹ ಸಂದರ್ಭದಲ್ಲೂ ರೈತರ ಜೊತೆ ಇರುತ್ತೇವೆ. ಅಂತಹ ಸಂದರ್ಭ ಬಂದರೆ ರೈತರ ಜೊತೆ ವಿಧಾನಸೌಧ ಚಲೋ ಮಾಡಲು ಸಿದ್ಧ. ಇದು ದಪ್ಪ ಚರ್ಮದ ಸರ್ಕಾರ. ಇದರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ" ಎಂದು ಎಚ್ಚರಿಕೆ ನೀಡಿದರು.





Comments
Leave a Comment